ಪುಸ್ತಕದ ಮುಖಬೆಲೆ - 250 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 210 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಹೆಣ್ಣಿನ ಧಾರಣಾ ಶಕ್ತಿ ಸದಾ ಅಚ್ಚರಿ ಹುಟ್ಟಿಸುವಂತಹದ್ದು. ಅಂತಹದ್ದೇ ಅಚ್ಚರಿ ವೇದ ಅವರನ್ನು ನೋಡಿದಾಗಲೂ ಆಗುತ್ತದೆ. ಕೊಡಗು, ಭದ್ರಾವತಿ, ಸಿಂಧನೂರು, ಬೆಂಗಳೂರು, ಮತ್ತೆ ಭದ್ರಾವತಿ ಎಂದೆಲ್ಲ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದ ವೇದಾ ಮನೋಹರ ಮಸ್ಕಿ ಅವರು ಈಗ ಭದ್ರಾವತಿಯ ಸಮೀಪದ ಗುಡ್ಡದ ಹಟ್ಟಿಯಲ್ಲಿ ತೋಟದ ಮನೆ ಮಾಡಿಕೊಂಡು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಈ ತೋಟದ ಮನೆಗೆ ’ಪಂಚಮವೇದ’ ಎಂಬ ಹೆಸರು. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಮಾಡುವ ಇವರ ಕೃಷಿ ವಿಧಾನವೇ ತುಂಬ ವಿಭಿನ್ನವಾದದ್ದು. ಜೊತೆಗೆ ಹೈನುಗಾರಿಕೆ ಕೂಡ. ಹೀಗೆ ಇಡೀ ಬದುಕನ್ನು ಧನಾತ್ಮಕವಾಗಿಯೇ ನೋಡುವ ವೇದಾ ಅವರ ಬದುಕಿನಲ್ಲೂ ಅನೇಕ ಸಂಘರ್ಷಗಳಿದ್ದವು, ಹೋರಾಟಗಳಿದ್ದವು. ಅವೆಲ್ಲವನ್ನೂ ಮೆಟ್ಟಿ ಯಶಸ್ಸನ್ನು ಸಾಧಿಸಿದವರು ಇವರು. ಈಗ ಪಂಚಮವೇದ ಒಂದು ಅಧ್ಯಯನ ಕೇಂದ್ರವಾಗಿ ಬೆಳೆದು ನಿಂತಿದೆ. ಇಷ್ಟೆಲ್ಲ ಸಾಧಿಸುವ ಹಿಂದಿದ್ದ ಹೋರಾಟ, ಸಂಘರ್ಷ, ಗೆಲುವು ಎಲ್ಲದರ ಮೊತ್ತವೇ ಪಂಚಮವೇದವೆಂಬ ಈ ಪುಸ್ತಕ. ವೇದ ಮನೋಹರ ಮಸ್ಕಿ ಅವರ ತೋಟದ ಮನೆಯ ಹೆಸರು ಹೊತ್ತು ಬಂದಿರುವ ಪಂಚಮವೇದ ಪುಸ್ತಕವನ್ನು ಕನ್ನಡದ ಪತ್ರಕರ್ತೆ, ಕಥೆಗಾರ್ತಿ ಭಾರತಿ ಹೆಗಡೆ ಅವರು ತಮ್ಮ ಆಪ್ತ ಶೈಲಿಯಲ್ಲಿ ನಿರೂಪಿಸಿದ್ದಾರೆ. ಸೋತ ಮನಸ್ಸಿಗೊಂದು ಸಾಂತ್ವನ ಹೇಳುವ ಪಂಚಮವೇದ ಪುಸ್ತಕಕ್ಕೆ ಹಿರಿಯ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ ಅವರು ಬೆನ್ನುಡಿ ಬರೆದಿದ್ದರೆ, ಪರಿಸರವಾದಿ, ಲೇಖಕ ಶಿವಾನಂದ ಕಳವೆ ಅವರು ಮುನ್ನುಡಿ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.